ಗ್ರಾಮೀಣ ಅಭಿವೃದ್ದಿ ಕಾರ್ಯಾಗಾರ

   ವಲಯ ಸಮಿತಿ ಸದಸ್ಯರಿಗೆ “ ಸ್ವ-ಉದ್ಯೋಗ ಮತ್ತು ಗ್ರಾಮೀಣ ಅಭಿವೃದ್ಧಿ” ಕಾರ್ಯಾಗಾರ
ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ(ರಿ) ಮತ್ತು ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ(ರಿ), ಇವರ ಸಂಯುಕ್ತ ಆಶ್ರಯದಲ್ಲಿ ಪ್ರತಿಷ್ಠಾನದ, ವಲಯ ಸಮಿತಿ ಸದಸ್ಯರಿಗೆ “ಸ್ವ-ಉದ್ಯೋಗ ಮತ್ತು ಗ್ರಾಮೀಣ ಅಭಿವೃದ್ಧಿ” ಕಾರ್ಯಾಗಾರವನ್ನು ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಪ್ರತಿಷ್ಠಾನದ ಮೂಲಕ ನಡೆಯುವ ಶೈಕ್ಷಣಿಕ, ಸಾಮಾಜಿಕ ಹಾಗೂ ಧಾರ್ಮಿಕ ಚಟುವಟಿಕೆಗಳು ಗ್ರಾಮೀಣ ಪ್ರದೇಶದ ಫಲಾನುಭವಿಗಳಗೆ ತಲುಪಬೇಕು ಎನ್ನುವ ಮುಖ್ಯ ಉದ್ದೇಶದಿಂದ, ಕುಡಾಲ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ್ ಸಮಾಜ ಭಾಂಧವರು, ಹೆಚ್ಚಾಗಿ ನೆಲೆಸಿರುವ ವ್ಯಾಪ್ತಿ ಪ್ರದೇಶಗಳಾದ ವಗ್ಗ, ಬೆಳ್ತಂಗಡಿ, ಪುತ್ತೂರು, ಸಿದ್ಧಕಟ್ಟೆ, ವಾಮದಪದವು, ಮತ್ತು ಇರುವೈಲು ಮುಂತಾದ ಕಡೆಗಳಲ್ಲಿ ವಲಯ ಸಮಿತಿಗಳನ್ನು ಕಳೆದೆರಡು ತಿಂಗಳುಗಳಲ್ಲಿ ರಚಿಸಲಾಗಿತ್ತು. ವಲಯ ಸಮಿತಿಗಳನ್ನು ಸದೃಢ ಹಾಗೂ ಸ್ವಾವಲಂಬಿಯಾಗಿ ಬೆಳೆಸುವ ನಿಟ್ಟಿನಲ್ಲಿ ಈ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಉದಯ ಹೆಗ್ಡೆ, ಇವರು ತಮ್ಮ ಪ್ರತಿಷ್ಠಾನದ ಪರಿಚಯವನ್ನು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಹಮ್ಮಿಕೊಳ್ಳಬಹುದಾದಂತಹ ಯೋಜನೆಗಳ ಮಾಹಿತಿಯನ್ನು ನೀಡಿದರು. ಇನ್ನೋರ್ವ ಸಂಪನ್ಮೂಲ ವ್ಯಕ್ತಿ, ಶ್ರೀ ಬಸಪ್ಪ ಮುದೋಳ್, ಇವರು ಪ್ರಾಯೋಗಿಕ ನೆಲೆಯಲ್ಲಿ ಹಮ್ಮಿಕೊಳ್ಳಬಹುದಾದ ಯೋಜನೆಗಳು ಹಾಗೂ ಈ ಯೋಜನೆಗಳಿಗೆ ಅವರು ನೀಡುವ ಸಹಕಾರವನ್ನು ಸವಿವರವಾಗಿ ತಿಳಿಸಿದರು. ತದನಂತರ, ವಲಯ ಸಮಿತಿ ಸದಸ್ಯರು ಗುಂಪು ಚರ್ಚೆ ಮೂಲಕ, ಅವರವರ ವಲಯಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ಜೇನು ಸಾಕಾಣೆ, ಹೈನುಗಾರಿಕೆ ಮತ್ತು ಟೈಲರಿಂಗ್, ಈ ವಿಷಯಗಳಿಗೆ ಸಂಬಂಧಿಸಿದಂತೆ ಚಟುವಟಿಕೆಗಳನ್ನು ನಡೆಸುವ ಕ್ರಿಯಾಯೋಜನೆಯನ್ನು ರಚಿಸಿ, ಸಭೆಯ ಮುಂದೆ ಮಂಡಿಸಿದರು. ಪ್ರತಿಷ್ಠಾನದ ಸಲಹೆಗಾರರಾದ ಡಾ.ಪ್ರವೀಣ್‍ಚಂದ್ರ ನಾಯಕ್, ಇವರು “ಆರೋಗ್ಯ ಶಿಬಿರ” ವನ್ನು ಹಮ್ಮಿಕೊಳ್ಳುವ ಬಗೆ ಸದಸ್ಯರೊಂದಿಗೆ ಚರ್ಚಿಸಿದರು.
ವೇದಿಕೆಯಲ್ಲಿ ಕೊಗ್ಗ ನಾಯಕ್  ಓಮ, ದಯಾನಂದ ಪ್ರಭು ಬೆಳ್ತಂಗಡಿ, ಚಂದ್ರಹಾಸ ಪ್ರಭು ಪುರುಷರಕಟ್ಟೆ, ಗಣಪತಿ ಶೆಣೈ ಡೆಚ್ಚಾರ್, ಶ್ರೀ ಪೂರ್ಣಾನಂದ ವಿವಿದ್ದೋದ್ಧೇಶ ಸೌಹಾರ್ದ ¸ಹಕಾರಿ ನಿಯಮಿತ (ರಿ)ಅಧ್ಯಕ್ಷ ಗಣೇಶ್ ಶೆಣೈ ಮರೋಳಿ, ವಿಮಲಾ—-ಇಳಿಕಾ, ರಾಮಕೃಷ್ಣ ಪ್ರಭು ಮಾರಿಬೆಟ್ಟು, ಶಾಂತಾರಾಮ್ ನಾಯಕ್ ಕಡಂಬು, ವಾಸುದೇವ್ ನಾಯಕ್ ಇನೋಳಿ, ಚಂದ್ರಶೇಖರ್ ಪ್ರಭು ಹೆಣ್ಣೂರು ಉಪಸ್ಥಿತತಿದ್ದರು. ಮುರಳೀಧರ ಪ್ರಭು ವಗ್ಗ, ಇವರು ಹೊಸದಾಗಿ ಅನಾವರಣಗೊಂಡ “ಶ್ರೀ ಪೂರ್ಣಾನಂದ ವಾಣಿ” ಪತ್ರಿಕೆಯ ಉದ್ದೇಶವನ್ನು ತಿಳಿಸಿದರು.
ಪ್ರತಿಷ್ಠಾನದ ಅಧ್ಯಕ್ಷ ರಮೇಶ್ ನಾಯಕ್, ಮೈರಾ ಸ್ವಾಗತಿಸಿ, ಕಾರ್ಯಾಧ್ಯಕ್ಷ ಸಂಜಯ್ ಪ್ರಭು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ. ವಿಜಯಲಕ್ಷ್ಮೀ ನಾಯಕ್ ಕಾರ್ಯಕ್ರಮ ನಿರೂಪಿಸಿದರು.