ದಂಪತಿಗಳಿಂದ ನಾಲ್ಕನೇ ವರ್ಷದ ವಿವಾಹ ವಾರ್ಷಿಕೋತ್ಸವ ಪ್ರಯುಕ್ತ ಅಂಗಾಂಗ ದಾನ

ರಕ್ತದಾನ, ನೇತ್ರದಾನದ ಬಗ್ಗೆ ಕೇಳಿದ್ದೇವೆ. ಇದು ಹಳೇಯ ವಿಚಾರವಾದರೆ, ಇತ್ತೀಚಿನ ದಿನಗಳಲ್ಲಿ ತಮ್ಮ ಅಂಗಗಳನ್ನು ದಾನ ಮಾಡಿದ ಬೆರಳೆಣಿಕೆಯ ಮಹಾವ್ಯಕ್ತಿಗಳ ನೈಜ ಘಟನೆಯನ್ನು ಮಾಧ್ಯಮದಲ್ಲಿ ಕಂಡಿದ್ದೇವೆ. ಪ್ರತೀ ವರ್ಷ ಸಾವಿರಾರು ಜನರು ಅಂಗಗಳ ವೈಫಲ್ಯದಿಂದಾಗಿ, ಅಂಗ ಕಸಿಗಾಗಿ ನಿರೀಕ್ಷಿಸುತ್ತಾ ಸಾವನ್ನಪ್ಪುತ್ತಿದ್ದಾರೆ. ಭಾರತದಲ್ಲಿ 1.5ಲಕ್ಷ ಹೆಚ್ಚಿನ ಜನರಿಗೆ ಮೂತ್ರಪಿಂಡದ ಅಗತ್ಯವವಿದೆ. ಅಂಗಾಂಗ ದಾನ ಮಾಡುವ ಮಾಹಿತಿಯ ಕೊರತೆಯಿಂದಾಗಿ ಅಂಗಗಳನ್ನು ಪಡೆಯುವವರ ಸಂಖ್ಯೆಯು, ದಾನಮಾಡುವವರ ಸಂಖ್ಯೆಯ ನೂರು ಪಟ್ಟು ಜಾಸ್ತಿಯಿದೆ. ಇತ್ತೀಚಿನ ದಿನಗಳಲ್ಲಿ ಯುವಜನಾಂಗ ಸೂಕ್ತ ಮಾಹಿತಿಯನ್ನು ಪಡೆದು, ನೇತ್ರದಾನದ ಜತೆಗೆ ಅಂಗಾಂಗ ದಾನಕ್ಕಾಗಿ ಮುಂದೆ ಬರುತ್ತಿದ್ದಾರೆ. ಅನೇಕ ಸಂಘಟನೆಗಳು ಅಭಿಯಾನ ನಡೆಸುವ ಮೂಲಕ ಅಂಗಾಂಗ ದಾನಿಯರನ್ನು ಗುರುತಿಸಿ, ಅದಕ್ಕೆ ಪೂರಕವಾದ ನಮೂನೆಗಳನ್ನು ತುಂಬಿಸಿ, ದಾಖಲಿಸುವ ಮಹತ್ಕಾರ್ಯವನ್ನು ಮಾಡುತ್ತಿದೆ.
ಈ ಮಹಾತ್ಕಾರ್ಯವನ್ನು ಮಾಡಲು ಮುಂದೆ ಬಂದಿರುವ ದಾನ ವೀರ ಆದರ್ಶ ದಂಪತಿ ಶ್ರೀ ಸರ್ವೋತ್ತಮ್ ಶೆಣೈ ಮತ್ತು ಶ್ರೀಮತಿ ಶಶಿಕಲಾ.ಎಸ್.ಶೆಣೈ, ನಾನಿಂಜೆ ಮನೆ, ಕರ್ಪೆ, ಇವರು. ಇವರು “ತಮ್ಮ ಮರಣಾನಂತರ ಅಥವಾ ದೇಹವು ಯಾವುದೇ ರೀತಿಯಲ್ಲೂ ಸ್ಪಂದಿಸದ ಸಂದರ್ಭದಲ್ಲಿ, ನಮ್ಮ ದೇಹದ ಮುಖ್ಯ ಭಾಗಗಳನ್ನು ಸ್ವ-ಆಸಕ್ತಿಯಿಂದ ದಾನ ಮಾಡಬೇಕೆಂದು ನಿರ್ಧರಿಸಿದ್ದೇವೆ. ನಮ್ಮ ಮರಣಾನಂತರ ಅಗತ್ಯವಾದ ದೇಹದ ಭಾಗಗಳು ಸುಟ್ಟು ಹಾಳಾಗುವುದಕ್ಕಿಂತ, ಇನ್ನೋಂದು ಜೀವ ಉಳಿಯಲು ಸಹಾಯವಾಗಲಿ. ಇದು ನಮ್ಮ ನಾಲ್ಕನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸವಿನಿನಪಿಗಾಗಿ ಸಮಾಜಕ್ಕೆ ನಮ್ಮ ಪುಟ್ಟ ಕಾಣಿಕೆ” ಎಂದು ತಮ್ಮ ಮನದಾಳದ ಆಸೆಯನ್ನು ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ಅಧ್ಯಕ್ಷ ರಮೇಶ್ ನಾಯಕ್, ಇವರಿಗೆ ಪತ್ರ ಮುಖೇನ ತಿಳಿಸಿದ್ದಾರೆ. ಈಗಾಗಲೇ ಇಂತಹ ಕಾರ್ಯಗಳಿಗೆ ಸಹಾಯ ಮಾಡುತ್ತಾ ಬಂದಿರುವ, ಪ್ರತಿಷ್ಠಾನದ ಮೂಲಕವೇ ಈ ಕಾರ್ಯ ನಡೆಯಬೇಕು ಎನ್ನುವ ಬಲವಾದ ವಿನಂತಿಯೊಂದಿಗೆ, ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಪ್ರತಿಷ್ಠಾನಕ್ಕೆ ನೀಡಿರುತ್ತಾರೆ. ಶ್ರೀ ಸರ್ವೋತ್ತಮ್ ಶೆಣೈ ಮತ್ತು ಶ್ರೀಮತಿ ಶಶಿಕಲಾ.ಎಸ್.ಶೆಣೈ, ಕರ್ಪೆ, ಇವರ ಈ ದಿಟ್ಟ ನಿಲುವು, ಇಡೀ ಮಾನವಕುಲಕ್ಕೆ ಮಾದರಿಯಾಗಿದೆ. ಚಿರಯೌವನ ಈ ದಂಪತಿಗಳ ಮನಸ್ಸು ಎಷ್ಟೋಂದು ವಿಶಾಲವಾಗಿದೆಯಲ್ಲವೇ!!!!!!!?