Pragathi 2024

ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ್ ಗೌಡ್ ಬ್ರಾಹ್ಮಣ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಕುಡಾಳ್ ದೇಶ್ಕರ್ ಸಮುದಾಯದ ಪಿಯುಸಿ ಮತ್ತು ತತ್ಸಮಾನ ವಿದ್ಯಾರ್ಥಿಗಳಿಗೆ ವಸತಿ ಸಹಿತ ಮೂರು ದಿನಗಳ ಚಟುವಟಿಕೆ ಆಧಾರಿತ “ಪ್ರಗತಿ -2024” ವ್ಯಕ್ತಿತ್ವ ವಿಕಸನ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಾಗಾರದ ಸಮಾರೋಪ ಸಮಾರಂಭವು ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ ದಿನಾಂಕ 4.07.2024 ರಂದು ಜರುಗಿತು.

ವಿಶ್ವ ಕೊಂಕಣಿ ಕೇಂದ್ರದ ಕಾರ್ಯನಿರ್ವಾಹಣಾಧಿಕಾರಿಯಾದ ಡಾ.ದೇವದಾಸ್ ಪೈ ಅವರು ಇಂತಹ ಕಾರ್ಯಾಗಾರಗಳು ವಿದ್ಯಾರ್ಥಿ ದೆಸೆಯಲ್ಲಿ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ಸಿಗಬೇಕು. ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನವು ಇಂತಹ ಸಮಾಜಮುಖಿ ಕೆಲಸವನ್ನು ಮಾಡುವುದು ಸಾಧನೆಯ ಶ್ಲಾಘನೀಯ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು ಎಂದು ನುಡಿದರು.

ಕೆ.ಎಂ.ಸಿ. ಆಸ್ಪತ್ರೆ ಮಣಿಪಾಲದ ಡೆಪ್ಯೂಟಿ ಮ್ಯಾನೇಜರ್ ಹೆಚ್ ಆರ್ ಆದ ಶ್ರೀಮತಿ ಸುಚೇತಾ ಬಾಲಕೃಷ್ಣ ನಾಯಕ್ ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಅವಕಾಶಗಳು ಎಲ್ಲರಿಗೂ ಸಿಗುತ್ತವೆ ಆದರೆ ಅದನ್ನು ಬಳಸಿಕೊಳ್ಳುವಂತದ್ದು ಮಾತ್ರ ಅವರವರ ಬುದ್ಧಿವಂತಿಕೆ ಮತ್ತು ಕೌಶಲ್ಯತೆಯನ್ನು ಹೊಂದಿರುತ್ತದೆ ಆದ್ದರಿಂದ ಕಾರ್ಯಾಗಾರದಲ್ಲಿ ಏನು ಕಲಿತ್ತಿದ್ದೀರಾ ಅದು ನಿಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಾಗ ಬದುಕಿನಲ್ಲಿ ಯಶಸ್ಸನ್ನು ಕಾಣಬಹುದು ಆಗ ಮಾತ್ರ ಕಾರ್ಯಗಾರವು ಸಾರ್ಥಕವಾದಂತಾಗುತ್ತದೆ. ಇದುವೇ ನೀವು ಸಂಘಟಕರಿಗೆ ಕೊಡುವಂತಹ ಕೃತಜ್ಞತೆಗಳು ಎಂದು ನುಡಿಯುತ್ತಾ ಶಿಬಿರಾರ್ಥಿಗಳನ್ನು ಅಭಿನಂದಿಸಿ ಶುಭವನ್ನು ಹಾರೈಸಿದರು.

ಶಿಕ್ಷಣ ಕೇವಲ ಅಂಕಗಳಿಕೆ ಅಥವಾ ಉದ್ಯೋಗ ಗಳಿಕೆಯೆ ಮುಖ್ಯ ಗುರಿಯಾಗಿರಬಾರದು. ಅಂಕಗಳನ್ನು ಗಳಿಸುವುದರ ಜೊತೆಗೆ ಪುಸ್ತಕದ ಮೇಲಿನ ಪ್ರೀತಿಯೊಂದಿಗೆ ಜ್ಞಾನ ಬೆಳೆಸಿಕೊಳ್ಳಬೇಕು. ಕೇವಲ ಅಂಕ ಗಳಿಕೆ ಒಂದೇ ಬುದ್ದಿವಂತಿಕೆಯ ಮಾನದಂಡವಲ್ಲ, ಬದಲಿಗೆ ಕ್ರಿಯಾಶೀಲತೆಯಿಂದ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ಕಲಿತು ಬೆಳೆಸಿಕೊಳ್ಳಬೇಕು. ಅತ್ಯಂತ ವೇಗದಲ್ಲಿ ಓಡುತ್ತಿರುವ ಆರ್ಥಿಕತೆಯ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಭಿವೃದ್ಧಿ ಹಾಗೂ ಆವಿಷ್ಕಾರಗಳ ಹೊಸ ಹೊಸ ತಂತ್ರಜ್ಞಾನಗಳ ಹಾಗೂ ಬದಲಾವಣೆಗಳ ಜೊತೆಯಲ್ಲಿ
ಸಂಸ್ಕಾರದೊಂದಿಗಿನ ಮೌಲ್ಯಯುತ ಬದುಕನ್ನು ಕಟ್ಟಿಕೊಳ್ಳಲು ವಿದ್ಯಾರ್ಥಿಗಳು ಸಿದ್ದರಾಗಿರಬೇಕು ಎಂದು ವಿಶ್ವ ಕೊಂಕಣಿ ಕೇಂದ್ರದ ಆಡಳಿತ ಮಂಡಳಿಯ ಟ್ರಸ್ಟಿ ಗಳಾದ ಶ್ರೀ ಡಿ. ರಮೇಶ್ ನಾಯಕ್ ಮೈರ ಅವರು ಶಿಬಿರಾರ್ಥಿ ವಿದ್ಯಾರ್ಥಿಗಳಿಗೆ ಶುಭ ಹಾರೈಕೆಗಳೊಂದಿಗೆ ಅಭಿನಂದಿಸಿದರು.

ಡಾ|| ವಿಜಯಲಕ್ಷ್ಮಿ ನಾಯಕ್ ಅವರು ಈ ಮೂರು ದಿನಗಳ ಕಾರ್ಯಾಗಾರದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡು ಬಹಳ ಶಿಸ್ತುಬದ್ಧವಾಗಿ ನಿರ್ವಹಿಸಿದರು.

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘದ ಕಾರ್ಯದರ್ಶಿಯವರಾದ ಶ್ರೀ ದಯಾನಂದ ನಾಯಕ್ ಪುಂಜಾಲ್ ಕಟ್ಟೆ, ಇವರು ಶಿಬಿರದ ಅಗತ್ಯತೆಯನ್ನು ವಿವರಿಸಿದರು ಹಾಗೂ ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನದ ಪದಾಧಿಕಾರಿಯಾದ ಸುಧೀರ್ ನಾಯಕ್ ಅಮ್ಮೆಂಬಳ, ಇವರು ಸಂಘಟನೆಯ ಮಹತ್ವವನ್ನು ಪ್ರಸ್ತುತಪಡಿಸಿದರು. ಕಾರ್ಯಾಗಾರದಲ್ಲಿ ಶಿಬಿರಾಥಿ೯ ರಕ್ಷಿತಾ ಶೆಣೈ ಕಪೆ೯ ಸ್ವಾಗತಿಸಿದರು. ರಾಮ್ ಪ್ರಸಾದ್ ವಂದಿಸಿ, ಶ್ರೀಷಾ ಕುಮಾರ್ ನಿರೂಪಿಸಿದರು.
ಶ್ರೀ ಸುರೇಂದ್ರ ನಾಯಕ್ ನೂಜಿನಡ್ಕ, ಚಿದಾನಂದ ಪ್ರಭು ಒಡ್ಡೂರು, ಮುರಳೀಧರ ಪ್ರಭು ವಗ್ಗ, ಶ್ರೀಮತಿ ಸುಚಿತ್ರ ರಮೇಶ್ ನಾಯಕ್, ಶ್ರೀಮತಿ ಸುಜಾತ ರಮೇಶ್ ಸಾಮಂತ್, ಸಂಜೀವ್ ಸಾಮಂತ್, ಅನಂತ್ ಪ್ರಭು ಮರೋಳಿ, ಪ್ರಶಾಂತ್ ಸಿದ್ಧಕಟ್ಟೆ , ಮಧುಸೂದನ್, ರಿಕ್ಷಾ ಮುಂತಾದವರು ಉಪಸ್ಥಿತರಿದ್ದರು.